Tuesday 1 April 2014

ಬದಲಾಗದ ತುಮಕೂರು ರೈಲು ನಿಲ್ದಾಣದ ಚಿತ್ರ

ತುಮಕೂರು: ನಗರದ ರೈಲು ಚಿತ್ರಣ ಬದಲಾಗು­ವಂತೆ ಕಾಣುತ್ತಿಲ್ಲ. ಸೌಲಭ್ಯಕ್ಕಾಗಿ ಪ್ರಯಾಣಿಕರ ವನವಾಸ ಇನ್ನೂ ಮುಂದುವರೆದಿದೆ. ಹನ್ನೆರಡು ವರ್ಷಗಳ ಹಿಂದೆಯೇ ನಗರದ ರೈಲು ನಿಲ್ದಾಣದ ಚಹರೆಯೇ ಬದಲಾಗಿ ಹೋಯಿತು ಎಂದು  ಪ್ರಯಾ­ಣಿಕರು ಕನಸು ಕಂಡಿದ್ದರು. ಆದರೆ ಇಂದಿಗೂ ಕನಸು ಕನಸಾಗಿಯೇ ಉಳಿದಿದೆ.
ನಗರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸ­ಬೇಕೆಂಬ ಜನರ ಒತ್ತಾಯಕ್ಕೆ ರೈಲ್ವೆ ಇಲಾಖೆ ಬಿಡಿಗಾಸಿನ ಬೆಲೆ ನೀಡಿಲ್ಲ ಎಂಬುದು ನಿಲ್ದಾಣ ನೋಡಿ­ದರೆ ವೇದ್ಯವಾಗುತ್ತದೆ. ಸಂಸದ ಜಿ.ಎಸ್‌.­ಬಸವರಾಜ್‌ ಕೂಡ ನಿಲ್ದಾಣ ಅಭಿವೃದ್ಧಿ ಪಡಿಸ­ಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆ­ದಿದ್ದಾರೆ. ಆದರೂ ಕೆಲಸ ಮಾತ್ರ ವೇಗ ಪಡೆದು­ಕೊಂಡಿಲ್ಲ.
ನಿಲ್ದಾಣ ಮೂಲ ಸೌಕರ್ಯ ಕೊರತೆಯಿಂದ ನರಳುತ್ತಿದೆ. ಗ್ರಾಮಾಂತರ ಪ್ರದೇಶದ ರೈಲು ನಿಲ್ದಾಣ­ದಲ್ಲಿರು­ವಂತಹ ಕನಿಷ್ಠ ಸೌಲಭ್ಯ ಇಲ್ಲಿಲ್ಲವಾಗಿದೆ. ನಿಲ್ದಾಣ­ದಲ್ಲಿ ರೈಲುಗಳು ನಿಂತಾಗ ಪ್ರಯಾಣಿಕರು ಶೌಚಾ­ಲಯ ಬಳಕೆ ಮಾಡುತ್ತಾರೆ. ಆದರೆ ಈ ರೈಲು ಹಳಿಗಳನ್ನು ಸ್ವಚ್ಛತೆ ಮಾಡುವ ವ್ಯವಸ್ಥೆಯೇ ಇಲ್ಲಿಲ್ಲವಾದ್ದರಿಂದ ಗಬ್ಬು ನಾರುತ್ತಿದೆ.
ಗೂಡ್ಸ್ ಶೆಡ್‌ ಅನ್ನು  ಕ್ಯಾತ್ಸಂದ್ರಕ್ಕೆ ಸ್ಥಳಾಂತರಿಸ­ಬೇಕೆಂಬ ಬೇಡಿಕೆ 12 ವರ್ಷಗಳಿಂದಲೂ ಇದೆ. ಈಗ ಈ ಕೆಲಸ ನಡೆಯುತ್ತಿದೆಯಾದರೂ ಆಮೆಗತಿಯಲ್ಲಿ ಸಾಗುತ್ತಿದೆ.  ಇನ್ನು ನಿಲ್ದಾಣದ ಅಭಿವೃದ್ಧಿ ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ವಿಶ್ರಾಂತಿ ಗೃಹಕ್ಕೂ ಬೀಗ ಜಡಿಯುವ ಕಾರಣ ಪ್ರಯಾಣಿಕರಿಗೆ ಇದ್ದು ಇಲ್ಲದಂತಾಗಿದೆ. ರಾತ್ರಿ ವೇಳೆ ತಂಗಲು ಒಂದೇ ಒಂದು ವಸತಿ ಕೊಠಡಿ ಇದೆ­ಯಾದರೂ ಇದು ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.
ಒಂದೇ ಒಂದು ಟಿಕೆಟ್‌ ಕೌಂಟರ್‌ ತೆರೆಯುವ ಕಾರಣ ಟಿಕೆಟ್‌ ಪಡೆಯಲು ಪ್ರಯಾಣಿಕರು ಹರ­ಸಾಹಸ ಪಡಬೇಕಿದೆ. ಎಷ್ಟೋ ವೇಳೆ ಟಿಕೆಟ್‌ ಕೊಳ್ಳುವಷ್ಟರಲ್ಲಿ ರೈಲುಗಾಡಿಗಳು ಚಲಿಸಿ ವಾಪಸ್‌ ಬರುವಂತಹ ಸನ್ನಿವೇಶವೂ ಇದೆ ಎಂಬುದು ಪ್ರಯಾಣಿಕರ ಅಳಲಾಗಿದೆ.
ಪ್ರಯಾಣಿಕರ ವಿಚಾರಣೆ ಕೌಂಟರ್‌ಗೆ ಇಲ್ಲಿ ಬೆಲೆಯೇ ಇಲ್ಲವಾಗಿದೆ. ಯಾವ ಟ್ರೈನ್‌ ಎಷ್ಟು ಗಂಟೆಗೆ ಬರುತ್ತದೆ, ಟಿಕೆಟ್‌ ದರ ಮತ್ತಿತರ ಮಾಹಿತಿ­ಯನ್ನೇ ಸಿಬ್ಬಂದಿ ಕೊಡುವುದಿಲ್ಲ. ಪ್ರಯಾಣಿಕ­ರೊಂದಿಗೆ ಸೌಜನ್ಯದ ನಡವಳಿಕೆ ತೋರುತ್ತಿಲ್ಲ. ರೈಲು ನಿಲ್ದಾಣಕ್ಕೆ ಹೋಗಬೇಕೆಂದರೆ ದಿಗಿಲಾಗುತ್ತದೆ ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜವಹರ್‌ ದೂರಿದರು.
ರೈಲುಗಳು ಸರಿಯಾದ  ಸಮಯ ಪರಿಪಾಲನೆ ಕೂಡ ಮಾಡುತ್ತಿಲ್ಲ. ಆದರೆ ಸಮಯ ಆಚೀಚೆ ಆದಾಗ ಆ ಮಾಹಿತಿ ನೀಡದ ಕಾರಣ ಪ್ರಯಾಣಿಕರು ಪರದಾಟ ಹೇಳತೀರದಾಗಿದೆ.
ರಾಜ್ಯದ 19 ಜಿಲ್ಲೆಗಳಿಗೆ ನಗರ ಹೆಬ್ಬಾಗಿಲು ಕೂಡ ಆಗಿರುವುದರಿಂದ ರೈಲು ಪ್ರಯಾಣಿಕರ ದಟ್ಟಣೆ ಕೂಡ ಹೆಚ್ಚುತ್ತಿದೆ. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಿಲ್ಲ. ಕನಿಷ್ಠ ಕುಡಿಯುವ ನೀರು ಸಹ ಇಲ್ಲವಾಗಿದೆ. ನಲ್ಲಿಗಳು ಕೆಟ್ಟು ನಿಂತಿರುವುದು ಕಾಣುತ್ತದೆ.
ಗೂಡ್ಸ್‌ಶೆಡ್‌ ಕಾಲೊನಿ ಕೂಡಲೇ ಸ್ಥಳಾಂತರಿಸ­ಬೇಕು. ಒಮ್ಮೊಮ್ಮೆ ಸಿಮೆಂಟ್ ಮತ್ತಿತರ ಸಾಮಗ್ರಿಗಳು ಬಂದಾಗ ಇಡೀ ನಿಲ್ದಾಣ ದೂಳಿನಿಂದ ಕೂಡುತ್ತದೆ. ಆಗ ನಿಲ್ಲಲೂ ಕೂಡ ಸಾಧ್ಯ­ವಾಗುವುದಿಲ್ಲ. ಶೌಚಾಲಯ ವ್ಯವಸ್ಥೆಯೂ ಸರಿ ಇಲ್ಲ. ಈ ನಿಲ್ದಾಣವನ್ನು ಇಲಾಖೆ ಕಡೆಗಣಿಸಿದೆ. ಸಾಕಷ್ಟು ಮನವಿ ನೀಡಿದರೂ ಅದಕ್ಕೂ ಸ್ಪಂದಿಸಿಲ್ಲ ಎಂದು ತುಮಕೂರು–ಬೆಂಗಳೂರು ರೈಲು ಪ್ರಯಾಣಿಕರ ವೇದಿಕೆಯ ಶಿವು ಹೇಳಿದರು.