Wednesday 23 November 2011

ಅಕ್ಕಿ ಗಿರಣಿಗಳ ರಾಜಧಾನಿ ತುಮಕೂರು


ಒಂದು ಕಾಲಕ್ಕೆ ಮಂಡ್ಯ, ಗಂಗಾವತಿ ರೀತಿಯಲ್ಲಿ ಭತ್ತದ ಬೆಳೆಗೆ ಹೆಸರಾಗಿದ್ದ ತುಮಕೂರು ಜಿಲ್ಲೆಯಲ್ಲಿ ಈಗ ಭತ್ತದ ಬೆಳೆ ಎಂದರೆ ಕೇವಲ ಕೃಷಿ ಪ್ರಾತ್ಯಕ್ಷಿಕೆಯಂತಾಗಿದೆ. ಹಿಂದಿನ ಭತ್ತದ ಬೆಳೆಯ ವೈಭವ ಇಲ್ಲಿ ಈಗ ಇಲ್ಲದಿದ್ದರೂ ಇದನ್ನು ಆಧರಿಸಿದ್ದ ರೈಸ್‌ಮಿಲ್‌ಗಳಿಗೆ (ಅಕ್ಕಿ ಗಿರಣಿ) ಮಾತ್ರ ಕೊರತೆ ಇಲ್ಲ. ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅಕ್ಕಿ ಗಿರಣಿಗಳನ್ನು ಹೊಂದಿದೆ.

ತುಮಕೂರು ನಗರ ಬೆಂಗಳೂರಿಗೆ ಹೆಚ್ಚು ಸಮೀಪವಾಗಿರುವುದು ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳ ಹೆಚ್ಚಳಕ್ಕೆ ಪ್ರಮುಖ ಕಾರಣ. ಅಕ್ಕಿಗೆ ಬೆಂಗಳೂರು ಪ್ರಮುಖ ಮಾರುಕಟ್ಟೆಯೂ ಹೌದು. ಇನ್ನೊಂದು ಅಂಶವೆಂದರೆ ಇಲ್ಲಿನ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳು ಅಕ್ಕಿ ಗಿರಣಿ ಉದ್ಯಮಕ್ಕೆ ಸಾಲ ನೀಡಿಕೆಯಲ್ಲಿ ಪ್ರಥಮ ಆದ್ಯತೆ ನೀಡುತ್ತಿರುವುದು ಈ ಉದ್ಯಮದ ಬೆಳವಣಿಗೆಗೆ ಕಾರಣವಾಗಿದೆ.
ಎರಡು ದಶಕಗಳ ಹಿಂದೆ ಪಾವಗಡ ಹೊರತುಪಡಿಸಿ ಜಿಲ್ಲೆಯ ಒಂಬತ್ತು (9) ತಾಲ್ಲೂಕುಗಳಲ್ಲಿ ಹೇರಳವಾಗಿ ಭತ್ತ ಬೆಳೆಯಲಾಗುತ್ತಿತ್ತು. ಮಳೆಯ ನಿರಂತರ ವೈಫಲ್ಯ, ಭತ್ತದ ಬೆಳೆಗೆ ಅಗತ್ಯವಾದ ನೀರಿನ ಕೊರತೆ, ಸಾವಿರಾರು ಅಡಿ ಕೊರೆದರೂ ಲಭ್ಯವಾಗದ ನೀರು ಮುಂತಾದ ಸಮಸ್ಯೆಗಳು ಜಿಲ್ಲೆಯಲ್ಲಿ ಭತ್ತದ ಬೆಳೆಯಿಂದ ರೈತರು ವಿಮುಖರಾಗುವಂತೆ ಮಾಡಿದವು. ಕಳೆದ ಐದಾರು ವರ್ಷಗಳಲ್ಲಿ ಹೇಮಾವತಿ ನೀರಿನ ಆಸರೆ ಇರುವ ತುರುವೇಕೆರೆ, ಗುಬ್ಬಿ, ಕುಣಿಗಲ್, ಭಾಗಶಃ ತುಮಕೂರು ತಾಲ್ಲೂಕುಗಳಲ್ಲಿ ಮಾತ್ರ ಭತ್ತದ ಬೆಳೆಯಾಗುತ್ತಿತ್ತು. ಹೆಚ್ಚು ಭತ್ತ ಬೆಳೆಯುವ ಈ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಒಂದೂವರೆ ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ವಾರ್ಷಿಕ ಸುಮಾರು ಐದು ಸಾವಿರ ಟನ್ ಭತ್ತದ ಉತ್ಪಾದನೆಯಾಗುತ್ತಿದೆ.
ಇದರಲ್ಲಿ ಅರ್ಧದಷ್ಟು ರೈತರ ಸ್ವಯಂ ಬಳಕೆಗೆ ಹಾಗೂ ಸ್ಥಳೀಯ ಬೇಡಿಕೆಗಳಿಗೆ ಪೂರೈಕೆಯಾದರೆ ಮಾರುಕಟ್ಟೆಗೆ ಅಥವಾ ಅಕ್ಕಿ ಗಿರಣಿಗಳಿಗೆ ಪೂರೈಕೆಯಾಗುವ ಭತ್ತದ ಪ್ರಮಾಣ ಶೇಕಡಾ 10 ರಷ್ಟು ಮಾತ್ರ. ಆದರೂ ಜಿಲ್ಲೆಯಲ್ಲಿ ಅಕ್ಕಿ ಗಿರಣಿ ಉದ್ಯಮ ವ್ಯಾಪಕವಾಗಿ ಬೆಳೆದಿರುವುದು ವಿಶೇಷವಾಗಿದೆ.
ತುಮಕೂರು ನಗರವೊಂದರಲ್ಲೆೀ 80 ಅಕ್ಕಿ ಗಿರಣಿಗಳಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಕ್ಕಿ ಗಿರಣಿಗಳು ಸೇರಿದಂತೆ 105 ಅಕ್ಕಿ ಗಿರಣಿಗಳನ್ನು ಒಳಗೊಂಡು ರಾಜ್ಯದಲ್ಲಿಯೇ ತುಮಕೂರು ಮುಂಚೂಣಿಯಲ್ಲಿದೆ. ಚಾಲ್ತಿಯಲ್ಲಿರುವ ಅಕ್ಕಿ ಗಿರಣಿಗಳ ಪೈಕಿ ಅರ್ಧದಷ್ಟು ಮಿಲ್‌ಗಳು ಕಳೆದ ಒಂದು ದಶಕದಲ್ಲಿ ಅಸ್ತಿತ್ವಕ್ಕೆ ಬಂದಿರುವುದು ಇಲ್ಲಿನ ರೈಸ್‌ಮಿಲ್ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ ಅಕ್ಕಿ ಗಿರಣಿ ಉದ್ಯಮ ಇಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಈಚೆಗೆ ಜಿಲ್ಲೆಯಲ್ಲಿ ಭತ್ತದ ಉತ್ಪನ್ನ ಕಡಿಮೆಯಾಗಿದ್ದರೂ ಭತ್ತವನ್ನು ಆಮದು ಮಾಡಿಕೊಂಡೇ ಉದ್ಯಮ ಅದ್ಭುತವಾಗಿ ಬೆಳೆದಿರುವುದು ವಿಸ್ಮಯವೇ ಸರಿ. ಇದಕ್ಕೆಲ್ಲಾ ತುಮಕೂರು ನಗರಕ್ಕೆ ರಾಜಧಾನಿ ಬೆಂಗಳೂರು ಕೇವಲ 70 ಕಿ.ಮೀ. ಸಮೀಪದಲ್ಲಿರುವುದೇ ಪ್ರಮುಖ ಕಾರಣ.
ದೂರದ ರಾಯಚೂರು, ಗಂಗಾವತಿ, ಕೊಪ್ಪಳ, ಬೆಳಗಾವಿ, ಮಂಡ್ಯ ಇಲ್ಲೆಲ್ಲಾ ವ್ಯಾಪಕವಾಗಿ ಭತ್ತ ಬೆಳೆದರೂ ಮಾರುಕಟ್ಟೆಯ ಕೊರತೆಯಿಂದ ಉತ್ಪನ್ನದ ಪ್ರಮಾಣಕ್ಕೆ ಅನುಗುಣವಾಗಿ ರೈಸ್‌ಮಿಲ್‌ಗಳು ಬೆಳವಣಿಗೆಯಾಗಿಲ್ಲ. ಇದನ್ನು ಅರಿತಿರುವ ತುಮಕೂರು ಜಿಲ್ಲೆಯ ಉದ್ಯಮಿಗಳು ಅಪಾರ ಅಕ್ಕಿ ಬೇಡಿಕೆ ಇರುವ ಬೆಂಗಳೂರು ನಗರವನ್ನು ಗುರಿಯಾಗಿಸಿಕೊಂಡು ಇಲ್ಲಿ ಅಕ್ಕಿ ಗಿರಣಿ ಉದ್ಯಮದಲ್ಲಿ ಆಸಕ್ತಿ ತಳೆದಿದ್ದಾರೆ.
ಬೆಂಗಳೂರು ನಗರಕ್ಕೆ ದಿನ ಒಂದಕ್ಕೆ ಸರಾಸರಿ 4000 ಟನ್ ಅಕ್ಕಿ ಅಗತ್ಯವಿದೆ. ಈ ಪೈಕಿ ನಿತ್ಯ 1600 ಟನ್ ಅಕ್ಕಿಯನ್ನು ತುಮಕೂರಿನ ಗಿರಣಿಗಳೇ ಪೂರೈಸುತ್ತಿವೆ. ಮಿಲ್‌ಟೆಕ್, ಜಪಾನ್‌ನ ಬುಲ್ಲರ್, ಸಟಾಕಿ ಯಂತ್ರಗಳನ್ನು ಅಳವಡಿಸಿಕೊಂಡು ಇಲ್ಲಿನ ಮಿಲ್‌ಗಳು ಆಧುನೀಕರಣಗೊಂಡಿವೆ.
ಕ್ಲೀನಿಂಗ್ ಹಂತದಿಂದ ಹಿಡಿದು ಭತ್ತವನ್ನು ಬೇಯಿಸುವ, ಹೊಟ್ಟನ್ನು ತೆಗೆಯುವ ಅಕ್ಕಿಯನ್ನು ಅಗತ್ಯಕ್ಕೆ ಅನುಗುಣವಾದ ಸಣ್ಣ ಮತ್ತು ದೊಡ್ಡ ಗಾತ್ರದಲ್ಲಿ ಪಾಲಿಷ್ ಮಾಡಿ ವಿಂಗಡಿಸುವ ಮುಂತಾದ ಎಲ್ಲವೂ ಕ್ರಿಯೆಗಳೂ ಆಧುನಿಕರಣಗೊಂಡಿವೆ. ಇಲ್ಲಿನ ಎಲ್ಲಾ ಮಿಲ್‌ಗಳಿಂದ ಪ್ರತಿದಿನ ಸರಾಸರಿ 213 ಟನ್‌ಗಳಿಗೂ ಅಧಿಕ ಪಾಲಿಷ್ ತೌಡು ಉತ್ಪಾದನೆಯಾಗುತ್ತಿದ್ದು, ಈ ತೌಡಿನಿಂದ ಖಾದ್ಯ ತೈಲ ಸಂಸ್ಕರಿಸಲಾಗುತ್ತದೆ. ಇದನ್ನು ಅವಲಂಬಿಸಿಯೇ ಇಲ್ಲಿ ಐದು ಆಯಿಲ್ ಎಕ್ಸ್‌ಟ್ರಾಕ್ಷನ್ ಕಾರ್ಖಾನೆಗಳು ನಡೆಯುತ್ತಿವೆ.
ಬೇರೆ ಬೇರೆ ಗಾತ್ರದಲ್ಲಿ ವಿಂಗಡಣೆಯಾಗಿ ಬರುವ ಅಕ್ಕಿ ಮತ್ತು ನುಚ್ಚು ದೊಡ್ಡ ಪ್ರಮಾಣದಲ್ಲಿ ಪೌಲ್ಟ್ರಿ (ಕೋಳಿ ಸಾಗಾಣಿಕೆ) ಉದ್ಯಮಕ್ಕೆ ಪೂರೈಕೆಯಾಗುತ್ತಿದೆ. ಹೀಗೆ ವಿವಿಧ ಸ್ಥರದಲ್ಲಿ ವಿಸ್ತಾರವಾಗಿ ಬೆಳೆಯುತ್ತಿರುವ ಈ ಉದ್ಯಮದ ವಿಕಾಸಕ್ಕೆ ಇಲ್ಲಿ ವಿಪುಲ ಅವಕಾಶವಿದೆ. ಸುತ್ತಮುತ್ತಲಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಈ ರೈಸ್‌ಮಿಲ್‌ಗಳು ತಕ್ಷಣದ ಉದ್ಯೋಗಗಳನ್ನು ಒದಗಿಸುತ್ತಿದ್ದು, ಸಹಸ್ರಾರು ಕಾರ್ಮಿಕರಿಗೆ ತುತ್ತಿನ ಚೀಲಕ್ಕೆ ನೆರವಾಗಿದೆ.
ತುಮಕೂರಿನ ಎಲ್ಲ ರೈಸ್‌ಮಿಲ್‌ಗಳಿಗೆ ಪ್ರತಿದಿನ ಸರಾಸರಿ 2670 ಟನ್ ಭತ್ತದ ಅಗತ್ಯವಿದೆ. ಇಷ್ಟು ಪ್ರಮಾಣದ ಭತ್ತದ ಮಿಲ್ಲಿಂಗ್ ನಿಂದ 1600 ಟನ್ ಅಕ್ಕಿ (ಶೇ.60ರಷ್ಟು), 213 ಟನ್ ತೌಡು (ಶೇ.8), 187 ಟನ್ ನುಚ್ಚು ಶೇ.7), 400 ಟನ್ ಉಮಿ (ಅಸ್ಕ್) ದೊರೆಯುತ್ತದೆ. ಇಷ್ಟು ಭತ್ತದ ಹಣಕಾಸು ವಹಿವಾಟು ಸರಾಸರಿ ಒಂದೂವರೆ ಕೋಟಿ ರೂಪಾಯಿ.

ಸಮಸ್ಯೆಗಳೂ ಇವೆ
ರೈಸ್ ಮಿಲ್ ಉದ್ಯಮದ ಈ ಸಾಧನೆ ಜತೆಗೆ ತನ್ನದೇ ಆದ ಸಂಕಷ್ಟಗಳು ಹಾಗೂ ಸವಾಲುಗಳನ್ನು ಎದುರಿಸುತ್ತಿದೆ ಎನ್ನುತ್ತಾರೆ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಭಗವತಿ ಭಗವಾನ್ ರೈಸ್ ಇಂಡಸ್ಟ್ರೀಸ್‌ನ ಮಾಲೀಕ ಆರ್.ಎಲ್. ರಮೇಶ್‌ಬಾಬು.
ಪ್ರತಿದಿನ 18 ಗಂಟೆ ಮೂರು ಫೇಸ್‌ನಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಅಗತ್ಯವಿದೆ. ಲೋಡ್‌ಶೆಡ್ಡಿಂಗ್ ಮತ್ತಿತರ ಸಮಸ್ಯೆಗಳಿಂದ ವಿದ್ಯುತ್ ಇರಲ್ಲ. ಈ ಉದ್ಯಮ ಮಾರುಕಟ್ಟೆ ಉದ್ಯಮದ ಏರಿಳಿತವನ್ನು ಅವಲಂಬಿಸಿರುವುದರಿಂದ ಕಾರ್ಮಿಕರನ್ನು ಕಾಯಂ ಆಗಿ ನೇಮಿಸಿಕೊಳ್ಳುವುದು ಕಷ್ಟಸಾಧ್ಯ. ಈ ಕಾರಣದಿಂದ ನುರಿತ ಕಾರ್ಮಿಕರ ಸಮಸ್ಯೆ ನಿತ್ಯದ ಗೋಳು.
ಇದರೊಂದಿಗೆ ಸರಕಾರ ನಿಗದಿಪಡಿಸಿದ ಲೇವಿ ಪದ್ಧತಿ ರೈಸ್ ಮಿಲ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲೇವಿಯಲ್ಲಿನ ಪ್ರಮಾಣವನ್ನು ಪರಿಷ್ಕರಿಸುವ ಅಗತ್ಯವಿದೆ. ಸಣ್ಣ ರೈಸ್ ಮಿಲ್‌ಗಳಿಗೆ ಉಗ್ರಾಣದ ಕೊರತೆ ಇದ್ದು, ಇಡೀ ಉದ್ಯಮಕ್ಕೆ ಪೂರಕವಾಗುವಂತೆ ಸಾರ್ವತ್ರಿಕ ಉಗ್ರಾಣದ ಅವಶ್ಯಕತೆ ಇದೆ.
ಸಂಕಷ್ಟದ ಜತೆಗೇ ಉದ್ಯಮ ಬೆಳೆಯುತ್ತಿದೆ. ಜೊತೆಗೆ ಜಿಲ್ಲಾಡಳಿತ ಕೈಗೊಳ್ಳುವ ಸಾರ್ವಜನಿಕ ಉಚಿತ ಆರೋಗ್ಯ ಶಿಬಿರ, ಸಾಹಿತ್ಯ ಸಮ್ಮೇಳನ, ಸರಕಾರಿ ನೌಕರರ ಸಮಾವೇಶಗಳಿಗೆ, ಸಂಘ ಸಂಸ್ಥೆಗಳು, ಮಠಗಳು ಆಯೋಜಿಸುವ ಉಚಿತ ಸಾಮೂಹಿಕ ವಿವಾಹ ಸಮಾರಂಭ, ಧಾರ್ಮಿಕ ಕಾರ್ಯಗಳಿಗೆ ಉಚಿತವಾಗಿ ಅಕ್ಕಿ ಒದಗಿಸುವ ಔದಾರ್ಯದ ಕೆಲಸವನ್ನೂ ಮಾಡುತ್ತಿವೆ.

No comments:

Post a Comment